ಬೆಂಗಳೂರು: ಆರ್ ಸಿ ಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ರಾಜ್ಯದ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ತನ್ನ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಧಾನಸೌಧ ನಡೆದ ಕಾರ್ಯಕ್ರಮದ ಬಗ್ಗೆ ಗೃಹ ಸಚಿವರಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ ಎನ್ನಲಾಗಿದೆ. ನಿರ್ಣಯ ತೆಗೆದುಕೊಂಡ ನಂತರ ಅವರನ್ನು ಸಂಪರ್ಕಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಅಧಿಕಾರಿಗಳು ವಿಜಯೋತ್ಸವ ಕಾರ್ಯಕ್ರಮ ಬೇಡವೇ ಎಂದಿದ್ದರು. ಅದೇ ಕಾರಣಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ತೆರೆದ ವಾಹನಗಳಲ್ಲಿ ಮೆರವಣಿಗೆ ಮಾಡಲು ಸಾಧ್ಯವಿಲ್ಲ ಎಂದು ನುಡಿದಿದ್ದರು. ಸಿಎಂ ಮತ್ತು ಡಿಸಿಎಂ ತರಾತುರಿಯಲ್ಲಿ ಕಾರ್ಯಕ್ರಮದ ಬಗ್ಗೆ ಘೋಷಿಸಿರುವುದು ಕೂಡ ಇವರಿಗೆ ಅಸಮಾಧಾನ ತರಿಸಿದೆ ಎನ್ನಲಾಗಿದೆ.
ಗೃಹ ಇಲಾಖೆಗೆ ಮನ್ನಣೆ ನೀಡದೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದಾದರೆ ನನ್ನನ್ನು ನನ್ನನ್ನು ಈ ಖಾತೆಯಿಂದ ಬದಲಾಯಿಸಿ ಬಿಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. ಈ ಹಿಂದೆಯೂ 2 ಬಾರಿ ಗೃಹ ಸಚಿವ ಖಾತೆ ನಿಭಾಯಿಸಿದ್ದರಿಂದ ಈ ಬಾರಿ ಶಿಕ್ಷಣ ಖಾತೆ ಸಚಿವರಾಗಬೇಕೆಂಬ ಕನಸು ಹೊತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಸಿಎಂ ಮತ್ತು ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಎರಡು ವರ್ಷ ಗೃಹ ಇಲಾಖೆಯನ್ನು ನಿಭಾಯಿಸಿದ್ದಾರೆ.