ಬಂಟ್ವಾಳ: ಮಂಗಳೂರು ತೆಂಕು ತಿಟ್ಟಿನ ಯಕ್ಷಗಾನ ಪ್ರಸಿದ್ಧ ಹಾಸ್ಯ ಕಲಾವಿದರಾದ ಪದ್ಮನಾಭ ಶೆಟ್ಟಿಗಾರ್ (70) ನಿಧನರಾಗಿದ್ದಾರೆ. ಕೊರಗದಾಸ ಅವರ ಬಳಿ ಯಕ್ಷಗಾನ ತರಬೇತಿ ಪಡೆದಿದ್ದ ಇವರು ಹಲವಾರು ಯಕ್ಷಗಾನ ಮೇಳಗಳಲ್ಲಿ ಬಣ್ಣ ಹಚ್ಚಿದ್ದರು.
ಮೂಕಾಸುರ, ವಿಜಯ, ದಾರುಕ, ಬಾಹುಕ, ಪಾಪಣ್ಣ ಈ ರೀತಿ ಅನೇಕ ಪೌರಾಣಿಕ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದರು. ಇವರು 'ಯಕ್ಷಗಾನ ಕಲಾರಂಗ' ಪ್ರಶಸ್ತಿಗೆ ಭಾಜರಾಗಿದ್ದರು.
ಇವರು ಕುಂಡಾವು, ಸುಬ್ರಮಣ್ಯ, ಕೊಲ್ಲೂರು, ಸುಂಕದಕಟ್ಟೆ, ಸುರತ್ಕಲ್ ಮತ್ತು ಕಟೀಲು ಮೇಳ ಸೇರಿದಂತೆ ಹಲವಾರು ಮೇಳಗಳಲ್ಲಿ ಕಳೆದ ಐದು ದಶಕಗಳಿಂದ ಯಕ್ಷಗಾನ ತಿರುಗಾಟ ನಡೆಸಿದ್ದರು.
ಕೆಲ ದಿನಗಳ ಹಿಂದೆ ನಡೆದ ಯಕ್ಷಧ್ರುವ ಕಾರ್ಯಕ್ರಮದಲ್ಲಿ ಯಕ್ಷ ನಿಧಿ ಸಂಸ್ಥೆಯು ರೂ. 50,000 ನಿಧಿಯೊಂದಿಗೆ 'ಸುವರ್ಣ ಪುರಸ್ಕಾರ' ಸನ್ಮಾನಕ್ಕೆ ಭಾಜನರಾಗಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.