ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ಮೂರನೇ ಅವಧಿಯಲ್ಲಿ ಒಂದು ವರ್ಷ ಸಂಪೂರ್ಣಗೊಳಿಸಿದೆ. ಹೀಗಾಗಿ ಒಟ್ಟಾರೆ ಕೇಂದ್ರದಲ್ಲಿ 11 ವರ್ಷಗಳ ಸುದೀರ್ಘ ಆಡಳಿತ ನಡೆಸಿಕೊಂಡು ಬಂದಿದೆ.
ಈ ಪ್ರಯುಕ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮಾತನಾಡಿ "ಪ್ರಧಾನಿ ಮೋದಿ ನಾಯಕತ್ವದಲ್ಲಿ ಸರ್ಕಾರ ಮಾಡಿರುವ ಕೆಲಸಗಳನ್ನು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡಬೇಕು" ಎಂದು ನುಡಿದ್ದಾರೆ. ಈ ಮೂಲಕ ಮೋದಿಯವರ 11 ವರ್ಷಗಳ ಅಧಿಕಾರವಧಿಯನ್ನು ಶ್ಲಾಘಿಸಿದ್ದಾರೆ.
"ಮೋದಿ ದೇಶದ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿ, ಜವಾಬ್ದಾರಿಯುತ ಸರ್ಕಾರವನ್ನು ಒದಗಿಸುವ ಮೂಲಕ ಉತ್ತಮ ಆಡಳಿತದ ರಾಜಕೀಯವನ್ನು ಪ್ರಾರಂಭಿಸಿದರು" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
"ಹಿಂದಿನ ಯುಪಿಎ ಸರಕಾರ ಭ್ರಷ್ಟಾಚಾರ, ಹಗರಣಗಳು ಮತ್ತು ಸಮಾಧಾನದ ರಾಜಕೀಯಕ್ಕೆ ಹೆಸರುವಾಸಿಯಾಗಿತ್ತು" ಎಂದು ಹೇಳಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಕುಟುಕಿದ್ದಾರೆ.
ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಮೋದಿ ಸರಕಾರವನ್ನು ವಾಗ್ದಾಳಿ ಮಾಡುವುದರೊಂದಿಗೆ ಕೇಂದ್ರ ಸರಕಾರಕ್ಕೆ ಅಂಕ ನೀಡುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ 'ಮೋದಿ ಸರಕಾರಕ್ಕೆ 10ಕ್ಕೆ 0 (ಸೊನ್ನೆ) ಅಂಕ ನೀಡುವುದಾಗಿ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು "ಮಾಧ್ಯಮ ಪ್ರಚಾರದಿಂದ ಮೋದಿ 11 ವರ್ಷಗಳನ್ನು ಪೂರೈಸಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಹಣಕಾಸು ಸಚಿವೆ 5300 ಕೋಟಿ ಕೊಡುವುದಾಗಿ ಹೇಳಿದ್ದರು ಆದರೆ ಏನನ್ನು ಕೊಟ್ಟಿಲ್ಲ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಬಿಜೆಪಿ ಅಪಪ್ರಚಾರ ಮಾಡುತ್ತಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.