ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆ ರಾಜ್ಯ ಸರ್ಕಾರಕ್ಕೆ ದೊಡ್ಡ ಪಾಠವಾಗಿದ್ದು, ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳಿಗೆ ಬಲವಾದ ಕಾನೂನು ನಿಯಮಗಳನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.
ಅಂತಹ ಆಘಾತಕಾರಿ ಘಟನೆ ಬಳಿಕ ಗೃಹ ಸಚಿವರು ಮಾಧ್ಯಮದೊಂದಿಗೆ ಮಾತನಾಡಿ, “ನಾವು ಹೊಸ ನಿಯಮಗಳನ್ನು ತರಲಿದ್ದೇವೆ,” ಎಂದು ಪ್ರಸ್ತಾಪಿಸಿದ್ದರು. ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಸ್ಪಷ್ಟನೆ ನೀಡಿ, “ಇದರಿಂದ ನಾವು ಪಾಠ ಕಲಿತಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ,” ಎಂದು ಹೇಳಿದ್ದಾರೆ.
ನಿಯಮಗಳ ಸಿದ್ಧತೆ ಪ್ರಾರಂಭ
ಸರ್ಕಾರದ ಮಹತ್ವದ ನಿರ್ಧಾರ ಪ್ರಕಾರ, ಭವಿಷ್ಯದಲ್ಲಿ ನಡೆಯುವ ಯಾವುದೇ ಸಾರ್ವಜನಿಕ ಸಮಾರಂಭಗಳ ಆಯೋಜಕರು ಈಗಿನಿಂದ ಹೆಚ್ಚಿನ ಜವಾಬ್ದಾರಿಯೊಂದಿಗೆ ನಡೆದುಕೊಳ್ಳಬೇಕಾಗುತ್ತದೆ. ಸರ್ಕಾರಿ ಸಹಕಾರ ಮತ್ತು ಸ್ಥಳೀಯ ಆಡಳಿತದ ಅನುಮತಿ ಹಾಗೂ ಪಾಲನೆಯಿಲ್ಲದೆ ಸಮಾರಂಭಗಳನ್ನು ನಡೆಸುವುದು ಕಾನೂನುಬದ್ಧವಾಗಿರುವುದಿಲ್ಲ.
ಉಲ್ಲಂಘನೆ ಮಾಡಿದರೆ ಕಠಿಣ ಶಿಕ್ಷೆ
ಇದಕ್ಕೆ ಸಂಬಂಧಿಸಿದಂತೆ ತಯಾರಾಗುತ್ತಿರುವ ಹೊಸ ಕಾನೂನಿನಲ್ಲಿ, ನಿಯಮ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಜರಗಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ತಪ್ಪಿತಸ್ಥರಿಗೆ ದಂಡ ಹಾಗೂ ಶಿಕ್ಷೆ ಎರಡೂ ವಿಧಿಸುವ ಕಾನೂನುಗಳನ್ನು ಒಳಗೊಂಡಿರುತ್ತದೆ.