ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಕ್ಕಪಕ್ಕದ ಗ್ರಾಮಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಮಂಗಳೂರಿನಲ್ಲಿ ರಸ್ತೆ ನಿರ್ಮಿಸಲಾಗಿದೆ. ಸುಮಾರು 170 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ, 50 ಕಿ.ಮೀ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಡಿಮೆ ಸಾಂದ್ರತೆಯ ಪಾಲಿಥಿನ್ ಬಳಸಿ ತಲಪಾಡಿಯಿಂದ ನಂತೂರು ವರೆಗೆ ಮತ್ತು ಸುರತ್ಕಲ್ ನಿಂದ ಸಾಸ್ತಾನ ದವರೆಗೆ ಈ ಮಾರ್ಗ ವನ್ನು ನಿರ್ಮಿಸಲಾಗಿದೆ.
ಹೆದ್ದಾರಿ ನಿರ್ಮಾಣದ ಮಾನದಂಡಗಳನ್ನು ರೂಪಿಸುವ ಇಂಡಿಯನ್ ರೋಡ್ ಕಾಂಗ್ರೆಸ್ (ಐ ಆರ್ ಸಿ) ಈ ರಸ್ತೆ ನಿರ್ಮಾಣಕ್ಕೆ ಎಲ್ ಡಿ ಪಿ ಇ ಪ್ಲಾಸ್ಟಿಕ್ ಬಳಕೆಗೆ ಅನುಮತಿ ನೀಡಿತ್ತು. ಇದು ಪರಿಸರ ಹಾನಿಯನ್ನು ಕಡಿಮೆ ಮಾಡುವುದೇ ಅಲ್ಲದೆ, ತ್ಯಾಜ್ಯ ನಿರ್ವಣೆಯನ್ನು ಕೂಡ ಕಡಿಮೆ ಮಾಡುತ್ತದೆ.
ಇದನ್ನು ಹೇಗೆ ಮಾಡಲಾಗುತ್ತದೆ?: ರಸ್ತೆ ನಿರ್ಮಾಣಕ್ಕೆ ಜಲ್ಲಿ ಮತ್ತು ಬಿಟುಮಿನ್ ಮಿಶ್ರಣವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. 160 ಡಿಗ್ರಿ ಸೆಲಿಸಿಯಸ್ ಉಷ್ಣತೆಯಲ್ಲಿ ಡಾಂಬರು ಬಿಸಿ ಮಾಡಿ, ಪ್ಲಾಸ್ಟಿಕ್ ಸಾಂದ್ರತೆಯನ್ನು ಜಲ್ಲಿ ಮೇಲೆ ಸುರಿಯಲಾಗುತ್ತದೆ. ಈ ಪ್ರಕ್ರಿಯೆಯಿಂದ ರಸ್ತೆಯು ಗಟ್ಟಿಯಾಗಿ ಸುದೀರ್ಘ ಬಾಳಿಕೆ ಬರುತ್ತದೆ. ಡಾಂಬರು ಮತ್ತು ಪ್ಲಾಸ್ಟಿಕ್ 90:10ರ ಅನುಪಾತದಲ್ಲಿ ಮಿಶ್ರಣ ಮಾಡಲಾಗುತ್ತದೆ.
ಮಂಗಳ ರಿಸೋರ್ಸಸ್ ಮ್ಯಾನೇಜ್ಮೆಂಟ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಕಡೆಗಳಿಂದ ಶೂನ್ಯ ನಿರ್ವಹಣಾ ವೆಚ್ಚದಿಂದ ಘನ ತ್ಯಾಜ್ಯ ಸಂಗ್ರಹಣೆಯ ಉಸ್ತುವಾರಿ ವಹಿಸಿಕೊಂಡಿದೆ. ನಾಲ್ಕು ವರ್ಷಗಳ ಹಿಂದೆ ಉಡುಪಿಯಲ್ಲಿ ಸುಮಾರು 10 ಕಿ ಮೀ ಉದ್ದದ ರಸ್ತೆ ನಿರ್ಮಾಣ ಈ ತಂತ್ರಜ್ಞಾನದ ಮೂಲಕ ಮಾಡಲಾಗಿದೆ ಎಂದು ತಿಳಿದುಬಂದಿದೆ.