ಬಂಟ್ವಾಳ, ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಲ್ಯಾಂಡ್ ಲಿಂಕ್ಸ್ ನಿವಾಸಿಯಾಗಿರುವ ಅನನ್ಯ ರಾವ್ ಅವರು ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡಿರುವುದು ದಕ್ಷಿಣ ಕನ್ನಡದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.
ನಿವೃತ್ತ ಟೆಲಿಕಾಂ ಉದ್ಯೋಗಿ ಸತೀಶ್ ರಾವ್ ಮತ್ತು ವೀಣಾ ದಂಪತಿಯ ಪುತ್ರಿ ಅನನ್ಯ ರಾವ್ ಗೆ ಭಾರತೀಯ ಸೇನೆ ಸೇರಬೇಕೆಂಬ ಹಂಬಲವಿತ್ತು. ಅದೇ ಕಾರಣಕ್ಕಾಗಿ ಕಾಲೇಜಿನಲ್ಲಿ ಎನ್ ಸಿ ಸಿ ತರಬೇತಿ ಪಡೆದಿದ್ದರು. ನಂತರ ಇಂಜಿನಿಯರಿಂಗ್ ಪದವಿ ಪಡೆದು ಬಳಿಕ ಸೇನಾ ನೇಮಕಾತಿ ಪರೀಕ್ಷೆಯ ಮೂಲಕ ಆಯ್ಕೆಗೊಂಡಿದ್ದರು.
10 ತಿಂಗಳ ಸುಧೀರ್ಘ ತರಬೇತಿಯ ನಂತರ ಅನನ್ಯ ಅವರು ಮೇ 31ರಂದು ಇಂಡಿಯನ್ ನೇವಲ್ ಅಕಾಡೆಮಿ ಎಝಿಮಾಲದಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ ನಲ್ಲಿ ಕಮಿಷನ್ಡ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ.
ಎಲ್ ಕೆ ಜಿ ಯಿಂದ 10ನೇ ತರಗತಿವರೆಗೆ ಕಾವೂರು ಬಿಜಿಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ, ನಂತರ ಪಿಯುಸಿ ಚೈತನ್ಯ ಕಾಲೇಜಿನಲ್ಲಿ ಹಾಗೂ ಸುರತ್ಕಲ್ಲಿನ ಎನ್ಐಟಿಕೆಯಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿರುತ್ತಾರೆ.
ಇವರ ತಂದೆ ಸತೀಶ್ ರಾವ್ ಅಂಗವಿಕಲರ ರಾಷ್ಟ್ರೀಯ ಸಂಘಟನೆ ಸಮಕ್ಷಮದ ಜಿಲ್ಲಾ ಖಜಾಂಚಿಯಾಗಿ ಅಂಗವಿಕಲರ ಸಶಕ್ತೀಕರಣಕ್ಕೆ ಶ್ರಮಿಸುತ್ತಿದ್ದಾರೆ.
ಬಾಲ್ಯದಿಂದಲೂ ದೇಶ ಸೇವೆಯಲ್ಲಿ ಅಭಿರುಚಿ ಹೊಂದಿದ್ದ ಅನನ್ಯ ರಾವ್ ಕಠಿಣ ಪರಿಶ್ರಮದಿಂದ ಇಂದು ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.