ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ನಡೆಯುವ ಕೋಳಿ ಅಂಕಕ್ಕೆ ಕಡಿವಾಣ ಹಾಕಲು ಎಸ್ಪಿ ಅರುಣ್ ಕುಮಾರ್ ನೇತೃತ್ವದ ತಂಡ ಸಜ್ಜಾಗಿದೆ. ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಅಲ್ಲಿನ ಕೋಳಿ ಅಂಕಗಳನ್ನು ನಿಯಂತ್ರಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದರು ಎನ್ನಲಾಗಿದೆ.
ಅದೇ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಯಾದ ದಿನದಿಂದ ಜಿಲ್ಲೆಯಲ್ಲಿ ನಡೆಯುವ ಕೋಳಿ ಅಂಕಗಳ ಮೇಲೆ ಕಾರ್ಯಾಚರಣೆಗೆ ಇಳಿದ್ದಿದ್ದಾರೆ. ಈಗಾಗಲೇ ಕೆಲವು ಕಡೆ ಪೊಲೀಸ್ ತಂಡ ದಾಳಿ ನಡೆಸಿದ್ದು ಹಣ, ಕೋಳಿ, ವಾಹನ ವಶಪಡಿಸಿಕೊಂಡ ಪ್ರಕರಣ ದಾಖಲಾಗಿದೆ.
ವಿಧಾನಸೌಧದಲ್ಲೂ ಚರ್ಚೆ
ವಿಧಾನಸೌಧದಲ್ಲಿ ಕೆಲ ದಿನಗಳ ಹಿಂದೆ ಕೋಳಿ ಅಂಕದ ಬಗ್ಗೆ ಚರ್ಚೆ ನಡೆದಿತ್ತು. ಉಡುಪಿ ಶಾಸಕ ಯಶಪಾಲ್ ಸುವರ್ಣ ವಿಧಾನಸೌಧದಲ್ಲಿ ಈ ವಿಚಾರವನ್ನು ಎತ್ತಿದಾಗ ಸ್ಪೀಕರ್ ಯು ಟಿ ಖಾದರ್ ಮತ್ತು ಕಾರ್ಕಳ ಶಾಸಕ ಸುನಿಲ್ ಕುಮಾರ್ ತುಂಬಾ ಸುದೀರ್ಘ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ಸುನಿಲ್ ಕುಮಾರ್ ರವರು ಡಿಕೆ ಶಿವಕುಮಾರ್ ರವರಿಗೆ 'ಕಟ್ಟದ ಕೋಳಿಯ ರುಚಿ ನೀವು ತಿಂದು ಅನುಭವಿಸಬೇಕು' ಎಂದು ಟಾಂಗ್ ನೀಡಿದ್ದರು.
ಕಡಬದಲ್ಲಿ ಕೋಳಿ ಅಂಕಕ್ಕೆ ದಾಳಿ
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ನೇರಂಕಿ ಎಂಬಲ್ಲಿ ತೋಟವೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಕಡಬ ಪೋಲಿಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅಭಿನಂದನ್ ರವರ ನೇತೃತ್ವದಲ್ಲಿ ದಾಳಿ ನಡೆಸಿ ಮೂರು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು ಎನ್ನಲಾಗಿದೆ.
ಈ ದಾಳಿಯಲ್ಲಿ ಸ್ಥಳದಲ್ಲಿದ್ದ 6 ಬೈಕ್, 2 ಕಾರು, 4 ಕೋಳಿ, 3,560 ರೂ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಕೋಳಿ ಅಂಕದಲ್ಲಿ ಉಪಯೋಗಿಸಲಾದ ಕತ್ತಿ ಮತ್ತು ಇನ್ನಿತರ ಸಾಮಗ್ರಿಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಲಿದೆ.