ಬಾಗಲಕೋಟೆ: ದೇಶದಾದ್ಯಂತ ಅಮಾನವೀಯ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದಕ್ಕೆ ಮತ್ತೊಂದು ಸಾಕ್ಷಿಯಂತೆ ಬಾಗಲಕೋಟೆಯಲ್ಲಿ ಬಹಳ ಬೇಸರ ತರಿಸುವ ಘಟನೆಯೊಂದು ನಡೆದಿದೆ. ಮಲಗಿದ್ದ ಗರ್ಭಿಣಿ ಹಸುವಿನ ಕೆಚ್ಚಲು ಕೊಯ್ದು ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಬಾಗಲಕೋಟೆಯ ಬಾದಾಮಿಯ ಕುಳಗೇರಿ ಕ್ರಾಸ್ ನಿಂದ ವರದಿಯಾಗಿದೆ.
ಹಸುವಿನ ಕೆಚ್ಚಲಿನಲ್ಲಿ ಅತೀವ ರಕ್ತಸ್ರಾವವಾಗಿರುವದನ್ನು ಕಂಡ ಮಾಲೀಕ ಭರಮಪ್ಪ ಕುರಿ, ತಕ್ಷಣ ಹಸುವನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಾನು ಪ್ರೀತಿಯಿಂದ ಸಾಕಿದ ಹಸುವಿನ ಪರಿಸ್ಥಿತಿ ನೋಡಿ ಮನೆಯವರು ದುಃಖಭರಿತರಾಗಿದ್ದಾರೆ.
ಕಳೆದ ಜನವರಿಯಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇದೇ ರೀತಿ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿದ್ದು, ಅವುಗಳ ಕಾಲಿಗೆ ಕತ್ತಿಯಿಂದ ಕಡಿದ ವಿಕೃತಿ ಮೆರೆದಿದ್ದರು.
ಇದೀಗ ಬಾಗಲಕೋಟೆ ಬಾದಾಮಿಯ ಕುಳಗೇರಿಯಲ್ಲಿ ಮೂಕ ಪ್ರಾಣಿ ಹಸುವಿನ ಕೆಚ್ಚಲು ಕತ್ತರಿಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾದಾಮಿ ಪೊಲೀಸರು ಪ್ರಕರಣ ದಾಖಲಿಸಿದ್ದು ತಪ್ಪಿಸ್ಥತರನ್ನು ಬಂಧಿಸುವ ಭರವಸೆ ನೀಡಿದ್ದಾರೆ.