ಬಂಟ್ವಾಳ: ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೋಮು ಸಂಘರ್ಷಗಳಿಗೆ ಕಡಿವಾಣ ಹಾಕುವ ಸಲುವಾಗಿ ರಾಜ್ಯ ಸರಕಾರ ಈಗಾಗಲೇ ವಿಶೇಷ ಕಾರ್ಯಪಡೆಯನ್ನು ರಚಿಸಿದೆ. ಮಂಗಳೂರಿನಲ್ಲಿ ಇದರ ಮುಖ್ಯ ಕಚೇರಿಯನ್ನು ಮಾಡಲಾಗಿದೆ.
ಈ ಕಾರ್ಯಪಡೆಯನ್ನು ರಚಿಸುವ ಎರಡು ದಿನದ ಮೊದಲು ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಹತ್ತಿರ ತಲವಾರು ಝಳಪಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಉಮರ್ ಫಾರೂಕ್ ಎಂಬವರು ಈ ಬಗ್ಗೆ ಕೇಸು ನೀಡಿದ್ದಾರೆ.
ಜೂನ್ 11 ರ ಮುಂಜಾನೆ ದೇರಳಕಟ್ಟೆಯಿಂದ ಸಜೀಪ ನಡುವಿನ ದೇರಾಜೆ ಬಸ್ ನಿಲ್ದಾಣ ಸಂಪಿಸುತ್ತಿದ್ದಂತೆ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರಲ್ಲಿ ಹಿಂಬದಿಯಲ್ಲಿ ಕುಳಿತಿರುವ ಸವಾರ ತಲವಾರು ಬೀಸಿದ್ದಾರೆ ಎಂದು ತಿಳಿಸಲಾಗಿದೆ.
ಈ ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಆದರೆ ಜೀಪಿನ ಸೈಡ್ ಕನ್ನಡಿ ಒಡೆದಿದೆ. ವೈಯಕ್ತಿಕ ಕಾರಣಗಳಿಂದ ಈ ಕೃತ್ಯ ಎಸಗಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.