20 June 2025 | Join group

ಮಂಗಳೂರು ಕದ್ರಿ ದೇವಸ್ಥಾನದಲ್ಲಿ ನೆರೆ ಸಂತ್ರಸ್ತರಿಗೆ ಮದ್ಯಾಹ್ನದ ಊಟದ ವ್ಯವಸ್ಥೆ: ಜನರಿಂದ ಮೆಚ್ಚುಗೆ

  • 15 Jun 2025 01:57:11 PM

ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಗರದ ಹಲವೆಡೆ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳು ನೀರಿನಿಂದ ಆವೃತವಾಗಿದೆ. ಹಲವಾರು ಕಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.

 

ನಿನ್ನೆಯಿಂದ ಸುರಿಯುವ ಮಳೆಯಿಂದ ಮಂಗಳೂರಿನ ಕೆಲ ಮನೆಗಳ ಗೋಡೆ ಕುಸಿದಿದ್ದು, ಜನರಿಗೆ ಹೊತ್ತಿನ ಊಟ ತಿಂಡಿ ಮಾಡದಂತ ಪರಿಸ್ಥಿತಿ ಎದುರಾಗಿದೆ. ಕೆಲ ಮನೆಗಳಲ್ಲಿ ಅಡುಗೆ ಕೊಠಡಿ ನೀರು ತುಂಬಿ ಆಹಾರ ಬೇಯಿಸಲು ಸಾಧ್ಯವಾಗುತ್ತಿಲ್ಲ.

 

ಈ ಎಲ್ಲಾ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಶ್ರೀ ಮಂಜುನಾಥ ದೇವಸ್ಥಾನ ಕದ್ರಿಯಲ್ಲಿ ಇಂದು ಜೂನ್ 15 ರಂದು ಮದ್ಯಾಹ್ನದ ಊಟದ ವ್ಯವಸ್ಥೆ ದೇವಸ್ಥಾನದ ಆಡಳಿತ ಮಂಡಳಿ ಮಾಡಿದೆ.

 

ಯಾರೆಲ್ಲ ಮಳೆಯಿಂದ ತೊಂದರೆಗೊಳಪಟ್ಟಿದ್ದಾರೆ ಅವರೆಲ್ಲರೂ ಶ್ರೀ ಕ್ಷೇತ್ರಕ್ಕೆ ಬಂದು ತಮಗೆ ಮತ್ತು ತಮ್ಮ ಮನೆಯ ಸದಸ್ಯರುಗಳಿಗೆ ಅನ್ನವನ್ನು ತೆಗೆದುಕೊಂಡು ಹೋಗಬೇಕಾಗಿ ಇಲ್ಲಿನ ವ್ಯವಸ್ಥಾಪನಾ ಮಂಡಳಿ ತಿಳಿಸಿತ್ತು.

 

ಕದ್ರಿ ದೇವಸ್ಥಾನದ ಈ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ದೊರೆತಿದೆ. ದೇವಾಲಯವೇ ದೈವದ ಮನೆ, ಇಲ್ಲಿ ಅನ್ನದಾನವೇ ಶ್ರೇಷ್ಠ ಪೂಜೆ ಎಂದು ಕದ್ರಿ ಮಂಜುನಾಥ ದೇವಸ್ಥಾನ ಮತ್ತು ಅಲ್ಲಿನ ಆಡಳಿತ ಮಂಡಳಿ ಸಾಬೀತುಪಡಿಸಿದೆ.