20 June 2025 | Join group

ಆಸ್ಟ್ರೇಲಿಯಾದಲ್ಲಿ ಲಕ್ಷಗಟ್ಟಲೆ ಸಂಬಳ ಗಿಟ್ಟಿಸುತ್ತಿದ್ದ ಪೊಳಲಿ ಕ್ಷೇತ್ರದ ವ್ಯಕ್ತಿ ಇಂದು ನಾಗಸಾಧು - ಬಾಬಾ ವಿಠಲ್ ರಾಜ್ ಮಹಾರಾಜ್

  • 10 Feb 2025 01:07:46 AM

ದಕ್ಷಿಣ ಕನ್ನಡ ಜಿಲ್ಲೆಯ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಬಡಗಬೆಳ್ಳೂರು ಗ್ರಾಮದಲ್ಲಿ ಜನ್ಮ ತಾಳಿದ ಈ ನಾಗಸಾಧು ಬಾಬಾನ ಹೆಸರು ನಾಗಸಾಧು ಬಾಬಾ ವಿಠಲ್ ರಾಜ್ ಮಹಾರಾಜ್ ಜೀ. 16 ವರುಷಗಳಿಂದ ಸನ್ಯಾಸ ಜೀವನ ನಡೆಸುತ್ತಿರುವ ಇವರು ಈಗ ಹಿಮಾಲಯದಲ್ಲಿ ತನ್ನ ಸೇವೆಯನ್ನು ಮಾಡುತ್ತಿದ್ದಾರೆ.

 

ತನ್ನ ಎಳೆವಯಸ್ಸಿನಲ್ಲೇ ಪೋಷಕರು ಇವರಿಗೆ ಕುಂಡಲ ಧಾರಣೆಯನ್ನು ಮಾಡಿದ್ದು, ಇವರು ಬಿಲ್ಲವ ಸಮಾಜಕ್ಕೆ ಸೇರಿದವರಾಗಿದ್ದಾರೆಂದು ತಿಳಿದು ಬಂದಿದೆ. ಇವರು ವಿವಾಹವಾಗದೆ ಆಧ್ಯಾತ್ಮಿಕ ಜೀವನದಲ್ಲಿ ತೊಡಗಿಸಿಕೊಂಡವರು. 4 ಜನ ಅಕ್ಕ ಮತ್ತು ಒಬ್ಬ ತಮ್ಮ ಹಾಗೂ ತಂದೆ ತಾಯಿ ಜೊತೆ ತನ್ನ ಬಾಲ್ಯದಲ್ಲಿ ಜೀವನ ಕಳೆದ ವಿಠಲ್ ಮಹಾರಾಜ್, ತಂದೆ ತಾಯಿಯ ಮರಣದ ನಂತರ ಎಲ್ಲವನ್ನು ತೊರೆದು ಸನ್ಯಾಸ ಜೀವನಕ್ಕೆ ತನ್ನ ಸರ್ವಸ್ವವನ್ನು ಧಾರೆಯೆಳೆದವರು.

 

ಆಸ್ಟ್ರೇಲಿಯಾದಲ್ಲಿ ಭಾರತದ ಕರೆನ್ಸಿ ಯಾ 3.50 ಲಕ್ಷ ಸಂಬಳ ಪಡೆಯುತ್ತಿದ್ದ ಇವರು, ಅಲ್ಲಿನ ಕಾಲೇಜು ಒಂದರಲ್ಲಿ ಸ್ಟೂಡೆಂಟ್ ಕೌನ್ಸಿಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಆಸ್ಟ್ರೇಲಿಯಾದಲ್ಲಿ 8 ವರುಷಗಳ ಕಾಲ ದುಡಿದು ಕೊನೆಗೂ ಲೋಕಿಕ ಜೀವನ ತೊರೆದು ಸನ್ಯಾಸಿ ಜೀವನ ಧಾರಣೆ ಮಾಡಲು ಭಾರತಕ್ಕೆ ಬಂದಿದ್ದರು. ಮೊದಲು ತಂದೆಯ ಮರಣ ಆಮೇಲೆ ತಾಯಿನ ಮರಣವಾದ ನಂತರ, ಈ ಜೀವನದಲ್ಲಿ ಯಾವುದು ಶಾಶ್ವತವಲ್ಲ, ದೇವರೊಂದೇ ಶಾಶ್ವತ ಎಂಬಹುದನ್ನು ಚೆನ್ನಾಗಿ ಅರಿತವರು ಈ ನಾಗಸಾಧು ಬಾಬಾ ವಿಠಲ್ ಮಹಾರಾಜ್ ಜೀ. 

 

ತನ್ನ ಪ್ರೌಢ ಶಿಕ್ಷಣ ಬಡಗಬೆಳ್ಳೂರುನಲ್ಲಿ ಮುಗಿಸಿ, ಪ್ರಾಥಮಿಕ ಶಿಕ್ಷಣ ಬೆಂಜನಪದವು ಸರಕಾರಿ ಶಾಲೆಯಲ್ಲಿ ಮಾಡಿ ಆಮೇಲೆ ಮೈಸೂರ್ ವಿಶ್ವವಿದ್ಯಾನಿಲಯದಲ್ಲಿ ಬಿಕಾಂ ಪದವಿ ಪಡೆದಿರುತ್ತಾರೆ. ಸನ್ಯಾಸಿ ದೀಕ್ಷೆ ಪಡೆದು ಮನೆ ತೊರೆದು 7 ರಿಂದ 8 ವರುಷಗಳು ಕಳೆದು ತನ್ನ ಎಲ್ಲ ರಕ್ತ ಸಂಬಂಧಿಗಳಿಂದ ಸಂಪೂರ್ಣ ಸಂಬಂಧ ಮುಕ್ತರಾಗಿದ್ದಾರೆ ಈ ಬಾಬಾ. 

 

ಮೂಡಬಿದಿರೆಯ ಕೊಣಾಜೆಕಲ್ಲಿನ ಗುಡ್ಡದಲ್ಲಿ ತಪಸ್ವಿಯಾಗಿದ್ದ ರಾಮ್ ಜೀ ದಾಸ್ ಮಹಾರಾಜ್ ಇವರ ಮೊದಲ ಗುರು ಆಗಿದ್ದು, ಅವರಿಂದ ದೀಕ್ಷೆ ಪಡೆದು ಆಮೇಲೆ ವಿವಿಧ 5 ಗುರುಗಳ ಸೇವೆ ಮಾಡಿರುವ ಈ ನಾಗಸಾಧು ಬಾಬಾ ವಿಠಲ್ ರಾಜ್ ಮಹಾರಾಜ್ ಅಯ್ಯಪ್ಪ ದೇವರ ಪರಮ ಭಕ್ತನಂತೆ.

 

ಈ ನಾಗಸಾಧುರವರು ಮಹಾಕುಂಭ ಮೇಳದಲ್ಲಿ ಬೀಡು ಬಿಟ್ಟಿದ್ದು, ಜೀವನದಲ್ಲಿ ಬರುವಾಗ ಯಾವುದನ್ನೂ ಕೊಂಡು ಬಂದಿಲ್ಲ ಹಾಗು ಹೋಗುವಾಗ ಒಂದು ಸೂಜಿ ಕೂಡ ಕೊಂಡು ಹೋಗಲ್ಲ, ಇಲ್ಲಿ ಏನು ಇದ್ದರು ರಾಮ್ ನಾಮ್ ಸತ್ಯಹೈ, ಈ ಮೋಹದ ಜಗತ್ತಿನಿಂದ ಮುಕ್ತಿ ಪಡೆಯಲು ದೇವರ ಪದಕ್ಕೆ ಶರಣು ಆಗೋದೇ ಒಂದು ನಿಜವಾದ ಮಾರ್ಗ ಎಂಬ ಉಪದೇಶಗಳನ್ನು ನೀಡುತ್ತಾ ದೇವರ ಸೇವೆ ಮಾಡುತ್ತಿದ್ದಾರೆ. ಈ ಲೇಖನವು ಬಲ್ಲ ಮೂಲಗಳಿಂದ ಪಡೆದ ಮಾಹಿತಿಯನ್ನು ಒಳಗೊಂಡಿದೆ.