ಮಂಗಳೂರು: ನಗರದ ಪಂಪ್ವೆಲ್ ನಲ್ಲಿ ಇತ್ತೀಚಿನ ಮಳೆಗೆ ನಡೆದ ಮುಳುಗಡೆ ಮತ್ತು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಿಂದ ಸಾರ್ವಜನಿಕರು ಕೆಂಡಾಮಂಡಲವಾಗಿದ್ದಾರೆ. ಜೂನ್ 12ರಿಂದ ಸುರಿದ ನಿರಂತರ ಮಳೆಯಿಂದಾಗಿ ಜೂನ್ 14ರಂದು ಪಂಪ್ ವೆಲ್ ಸರ್ಕಲ್ ಬಳಿಯ ಮಾರ್ಗ ಸಮುದ್ರದಂತಾಗಿತ್ತು .
ಪಂಪ್ವೆಲ್ ನ ಮಹಾವೀರ ಸರ್ಕಲ್ ಬಳಿ ಮಳೆ ನೀರು ಹರಿಯುವ ಚರಂಡಿಯ ಅಸ್ತವ್ಯಸ್ಥೆಯೇ ಈ ಎಲ್ಲ ದುರ್ಘಟನೆಗೆ ಮುಖ್ಯ ಕಾರಣ ಎಂದು ಸಾರ್ವಜನಿಕರು ಮಂಗಳೂರು ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಸ್ತವ್ಯಸ್ಥೆವಾಗಿರುವ ಒಳಚರಂಡಿಯಿಂದ ನೀರು ಮೇಲಕ್ಕೆ ಹರಿದು, ರಸ್ತೆಯ ಮೇಲೆ ಧುಮುಕಿ ರಸ್ತೆಯನ್ನು ಸಮುದ್ರದಂತಾಗಿಸಿರುವ ಘಟನೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಬಸ್ ಮತ್ತು ಕಾರುಗಳು ಹರಿಯುವ ನೀರಿನ ಪ್ರಭಾವಕ್ಕೆ ಸಿಲುಕಿಹಾಕಿಕೊಂಡ ಘಟನೆಯು ನಡೆದಿತ್ತು.
ಸಾಮಾಜಿಕ ಜಾಲತಾಣದಲ್ಲಿ ಒಳಚರಂಡಿಯ ವಿಡಿಯೋ ಹರಿದಾಡುತ್ತಿದ್ದು, ಸಾರ್ವಜನಿಕರು ಮಂಗಳೂರು ಮಹಾನಗರ ಪಾಲಿಕೆಯ ಬೇಜವಾಬ್ದಾರಿ ಕೆಲಸದ ವಿರುದ್ಧ ಕೋಪಗೊಂಡಿದ್ದು, ಆದಷ್ಟು ಬೇಗ ನಗರ ಪಾಲಿಕೆ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ.