ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಮೇ 20 ರಂದು ಕೈದಿಗಳ ಗಲಾಟೆಯಿಂದಾಗಿ ಹಾನಿಗೊಳಗಾದ ಮೊಬೈಲ್ ಜಾಮರ್ ನ್ನು ದುರಸ್ತಿ ಮಾಡಿ ಸಕ್ರಿಯಗೊಳಿಸಲಾಗಿದೆ. ಆದರೆ ಜಾಮರ್ ಹತ್ತಿರದ ಪ್ರದೇಶಗಳಲ್ಲಿ ಮತ್ತೊಮ್ಮೆ ನೆಟ್ವರ್ಕ್ ಸಮಸ್ಯೆ ಎದುರಾಗಿದೆ.
ಇತ್ತೀಚಿಗೆ ರಾಜ್ಯದ ಗೃಹ ಸಚಿವರಾದ ಡಾ ಜಿ ಪರಮೇಶ್ವರ್ ಮಂಗಳೂರು ಕಾರಾಗ್ರಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಜಾಮರ್ ನಿಂದ ಮೊಬೈಲ್ ನೆಟ್ವರ್ಕ್ ಸಿಗ್ನಲ್ ಸಮಸ್ಯೆಯನ್ನು ತಿಳಿಸಿದ್ದರು. ಪರಿಸ್ಥಿತಿ ಮತ್ತು ಸಂಬಂಧಿತ ಭದ್ರತಾ ಲೋಪಗಳನ್ನು ಅರಿತ ಅವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದರು.
ಇದೀಗ ಒಂದು ತಿಂಗಳ ನಂತರ ಜಾಮರ್ ದುರಸ್ತಿ ಮಾಡಲಾಗಿದ್ದು, ಸ್ಥಳೀಯರಿಗೆ ಮತ್ತೊಮ್ಮೆ ಮೊಬೈಲ್ ಸಿಗ್ನಲ್ ಗಳು ಸರಿಯಾಗಿ ಸಿಗದಂತಾಗಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಮತ್ತು ವ್ಯಾಪಾರಿಗಳಿಗೆ ಮೊಬೈಲ್ ಸಿಗ್ನಲ್ಗಳು ಮೇಲೆ ತೀವ್ರವಾಗಿ ಪರಿಣಾಮ ಬೀರಿವೆ.