ಬಂಟ್ವಾಳ: ತುಂಬು ಗರ್ಭಿಣಿ ಪತಿಯನ್ನು ಕೊಂದು ಬಳಿಕ ತಾನು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಬಡಗುಂಡಿ ಬಳಿಯ ಕಿಲ್ತೋಡಿಯಲ್ಲಿ ನಡೆದಿತ್ತು. ತಿಮ್ಮಪ್ಪ ಮೂಲ್ಯ(52) ಮತ್ತು ಪತ್ನಿ ಜಯಂತಿ(45) ಮೃತಪಟ್ಟ ದುರ್ದೈವಿಗಳು.
ಜಯಂತಿಯವರು ತುಂಬು ಗರ್ಭಿಣಿಯಾಗಿದ್ದು, ಸೀಮಂತಕ್ಕೆ ದಿನ ನಿಗದಿಯಾಗಿತ್ತು. ಆದರೆ ಕ್ಷುಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ನಂತರ ತಿಮ್ಮಪ್ಪ ಮೂಲ್ಯ ಪತ್ನಿ ಜಯಂತಿಯವರ ಕತ್ತು ಹಿಸುಕಿ ಕೊಂಡಿದ್ದಾರೆ. ಆ ನಂತರ ತಿಮ್ಮಪ್ಪ ಮೂಲ್ಯ ಕೂಡ ನೇಣಿಗೆ ಶರಣಾಗಿದ್ದಾರೆ.
ಇವರಿಬ್ಬರ ಮದುವೆಯಾಗಿ 15 ವರ್ಷಗಳಾಗಿದ್ದು, ಬಹಳ ಪ್ರಯತ್ನದ ಬಳಿಕ ಜಯಂತಿ ಗರ್ಭಿಣಿಯಾಗಿದ್ದಾರೆ. ಜುಲೈ 2 ರಂದು ಸೀಮಂತ ಮಾಡಲು ದಿನ ನಿಗದಿಯಾಗಿತ್ತು. ಗುರುವಾರ ಜೂನ್ 19 ರಂದು ಬೆಳಗ್ಗೆ ಮನೆಯಿಂದ ಯಾರು ಹೊರ ಬರದೇ ಇರುವುದನ್ನು ಕಂಡು ಪಕ್ಕದ ಮನೆಯವರು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂತು.
ಪತ್ನಿ ಜಯಂತಿಯವರು ಒಂದು ಕೋಣೆಯಲ್ಲಿ ಹೆಣವಾಗಿ ಬಿದ್ದಿದ್ದಾರೆ, ಮತ್ತೊಂದು ಕೋಣೆಯಲ್ಲಿ ತಿಮ್ಮಪ್ಪ ಮೂಲ್ಯರವರು ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದರು. ಜಯಂತಿ ಗರ್ಭಿಣಿಯಾಗಿರುವುದರಿಂದ ಒಟ್ಟು ಮೂರು ಜೀವಗಳು ಕಳೆದುಕೊಂಡಂತಾಗಿದೆ.
ಆ ಮನೆಯಲ್ಲಿ ಇವರಿಬ್ಬರೇ ವಾಸಿಸುತ್ತಿದ್ದು, ಈ ಕೊಲೆ ಪ್ರಕರಣ ನಿಗೂಢವಾಗಿ ಉಳಿಯಲಿದೆ. ಮೇಲ್ನೋಟಕ್ಕೆ ಪರಸ್ಪರ ಜಗಳ ಎಂದು ತಿಳಿದುಬಂದರು ನೈಜ ಕಾರಣ ತಿಳಿಯಲು ಕಷ್ಟ ಅಸಾಧ್ಯವಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.