ಬೆಂಗಳೂರು :ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಗಮನ ಸೆಳೆದಿದ್ದವು. 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಘೋಷಿಸಿದ ಈ 5 ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯ ಸರಕಾರವನ್ನು ರಚಿಸಲು ಪ್ರಮುಖ ಪಾತ್ರ ವಹಿಸಿದ್ದವು. ಆದರೆ, ಈಗ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಹೊಸ ಷರತ್ತು ವಿಧಿಸಲಾಗಿದೆ.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿತ್ತು. ಆದರೆ ಈಗ ಹೊಸದಾಗಿ ಮನೆ ಕಟ್ಟಿದವರು ಮತ್ತು ಬಾಡಿಗೆ ಮನೆ ಬದಲಾಯಿಸಿದವರು ಈ ಲಾಭ ಪಡೆಯಲು ಅಸಾಧ್ಯವಾಗಿದೆ. 2023ರ ಜುಲೈ 1ರಿಂದ ಜಾರಿಗೆ ಬಂದ ಈ ಯೋಜನೆಯ ಲಾಭ ಆಗಸ್ಟ್ 1ರಿಂದ ಗ್ರಾಹಕರಿಗೆ ಲಭ್ಯವಾಯಿತು. ಆದರೆ, ಈಗ ಹೊಸವಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ಪೂರ್ಣ ಲಾಭದಿಂದ ವಂಚಿತರಾಗಿದ್ದಾರೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಗೃಹಜ್ಯೋತಿ ಯೋಜನೆ ಒಂದು ವರ್ಷ ಪೂರ್ಣಗೊಂಡ ಬಳಿಕ ಸರಾಸರಿ ವಿದ್ಯುತ್ ಬಳಕೆಯನ್ನು ಪರಿಷ್ಕರಿಸುವುದಾಗಿ ಹೇಳಿದ್ದರು. 2024ರ ಜುಲೈನಲ್ಲಿ ಒಂದು ವರ್ಷ ಪೂರ್ಣವಾದರೂ, ಈವರೆಗೂ ಪರಿಷ್ಕರಣೆ ಆಗಿಲ್ಲ. ಇದರಿಂದ ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ "ಬಳಕೆಯ ಇತಿಹಾಸ" ಲಭ್ಯವಿಲ್ಲದ ಕಾರಣ, ಅವರಿಗೆ ಕೇವಲ 58 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ.
58 ಯೂನಿಟ್ ಪರಿಮಿತಿಯ ಶರತ್ತು:
ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದವರು ಪ್ರಥಮ ಹಂತದಲ್ಲಿ 53 ಯೂನಿಟ್ ಹಾಗೂ ಶೇ 10ರಷ್ಟು ಹೆಚ್ಚುವರಿ ಸೇರಿ ಒಟ್ಟು 58 ಯೂನಿಟ್ ಉಚಿತವಾಗಿ ಪಡೆಯಬಹುದು. ಆದರೆ, 58 ಯೂನಿಟ್ ಮೀರಿ 200 ಯೂನಿಟ್ ಒಳಗೆ ವಿದ್ಯುತ್ ಬಳಸಿದರೂ, ಹೆಚ್ಚಿನ ಬಳಕೆಗೆ ಶುಲ್ಕ ಪಾವತಿಸಬೇಕಾಗಿದೆ.
ಸರಾಸರಿ ಬಳಕೆಯ ದರ ಪರಿಷ್ಕರಣೆಯಿಂದ ಸರ್ಕಾರಕ್ಕೆ 500 ರಿಂದ 600 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಬಹುದು. ಪ್ರಸ್ತುತ ಸರಾಸರಿ ಬಳಕೆಯ ಮಾನದಂಡ ಪರಿಷ್ಕರಣೆ ಕುರಿತ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಮತ್ತು ಈ ಬಗ್ಗೆ ಇನ್ನೂ ಚರ್ಚೆಯಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.