Sunita Williams Return : ಕೊನೆಗೂ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ರವರ ಮರಳುವಿಕೆಗೆ ಜಗತ್ತು ಸಾಕ್ಷಿಯಾಯಿತು. ಭಾರತೀಯ ಕಾಲಮಾನ ಬೆಳಗಿನ ಜಾವ 3:27ರ ಸುಮಾರಿಗೆ ಫ್ಲೋರಿಡಾದ ಕರಾವಳಿಯ ಬಳಿ ಅಟ್ಲಾಂಟಿಕ್ ಸಾಗರದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದಾರೆ. ಭಾರತ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಸೇಫ್ ಆಗಿ ಭೂಮಿಗೆ ತಲುಪಿರುವುದು ವಿಶ್ವದಾದ್ಯಂತ ಸಂತಸ ತಂದಿದೆ.
ಆರಂಭದಲ್ಲಿ ಕೇವಲ ಒಂದು ವಾರಕ್ಕೆ ಯೋಜಿಸಲಾಗಿದ್ದ ಅವರ ಕಾರ್ಯಾಚರಣೆಯು ಅವರು ಮರಳಿ ಬರುವ ಸಂದರ್ಭದಲ್ಲಿ ವಾಹನದಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ 287 ದಿನಗಳವರೆಗೆ ವಿಸ್ತರಿಸಲ್ಪಟ್ಟಿತು. ಒಂಬತ್ತುಕ್ಕೂ ಹೆಚ್ಚು ತಿಂಗಳುಗಳ ಕಾಲವೆಲ್ಲಾ ಬಾಹ್ಯಾಕಾಶದಲ್ಲಿ ಕಳೆದಿರುವ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇವರಿಬ್ಬರ ಸಾಧನೆ ಅವಿಷ್ಮರಣೀಯ.
ಬಂದಿಳಿದ ವಿವರ
ಅವರಿದ್ದ ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮಾರ್ಚ್ 18ರಂದು ಭಾರತೀಯ ಕಾಲಮಾನ ಬೆಳಿಗ್ಗೆ 10:35 ಕ್ಕೆ ISS ನಿಂದ ಬೇರ್ಪಟ್ಟು ಭೂಮಿಯತ್ತ ಹೊರಟಿತು. ಈ ವೇಳೆ ತಮ್ಮ ಬಾಹ್ಯಾಕಾಶ ಸೂಟ್ಗಳನ್ನು ಬಿಚ್ಚಿ ಹೊರಬರುವುದೆಂದರೆ ಸಾಹಸದ ಕೆಲಸ. ಸ್ಪೇಸ್ಎಕ್ಸ್ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಇದರಿಂದಾಗಿ ನೌಕೆ ಭೂಮಿಯ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ, ಗೊತ್ತುಪಡಿಸಿದ ಸ್ಥಳದಲ್ಲಿಳಿಯಲು ಸಾಧ್ಯವಾಯಿತು.
ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಫ್ಲೋರಿಡಾದ ಸಮುದ್ರದ ಮೇಲೆ ಬಂದಿಳಿಯಿತು. ಆಕಾಶದಿಂದ ವೇಗವಾಗಿ ಬಂದ ಕ್ಯಾಪ್ಸೂಲ್ ನಿಧಾನವಾಗಿ ಸಮುದ್ರದ ಮೇಲೆ ಲ್ಯಾಂಡ್ ಆಯ್ತು. ಭೂಮಿ ಪ್ರವೇಶದ ಬಳಿಕ ಕ್ಯಾಪ್ಸೂಲ್ನಲ್ಲಿರುವ 4 ಪ್ಯಾರಾಚೂಟ್ಗಳು ತೆರೆದುಕೊಳ್ಳುವುದರ ಮೂಲಕ ಕ್ಯಾಪ್ಸೂಲ್ ವೇಗವನ್ನು ತಗ್ಗಿಸಿತ್ತು. ವೇಗ ತಗ್ಗಿದಂತೆ ಕ್ಯಾಪ್ಸೂಲ್ ನಿಧನವಾಗಿ ಸಮುದ್ರದಲ್ಲಿ ಟಚ್ಡೌನ್ ಆಯ್ತು. ನಂತರ ವಿಶೇಷ ದೋಣಿಯಲ್ಲಿ ಸ್ಪೇಸ್ ಎಕ್ಸ್ ಸಿಬ್ಬಂದಿ ನೌಕೆಯನ್ನು ರೋಪ್ ಬಳಸಿ ಹತ್ತಿರದಲ್ಲೇ ಇದ್ದ ದೊಡ್ಡ ಬೋಟ್ ಗೆ ಇಳಿಸಿದರು.
ಬಾಹ್ಯಾಕಾಶಕ್ಕೆ ಸಂಚರಿಸಿದ ಆ ದಿನ
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇಬ್ಬರೂ ಗಗನಯಾತ್ರಿಗಳು ಜೂ.5, 2024 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಈ ಉಪಗ್ರಹ ಉಡಾವಣೆ ಮಾಡಲಾಗಿತ್ತು. . ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14, 2024 ರಂದು ಸ್ಟಾರ್ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿತ್ತು.
ಭಾರತೀಯರ ಸಂಭ್ರಮಾಚರಣೆ
ಸುನೀತಾ ವಿಲಿಯಮ್ಸ್ ರವರ ಮರಳಿ ಬರುವಿಕೆಯ ವಿಷಯ ತಿಳಿದು ಭಾರತದಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ಗುಜರಾತಿನ ಮೆಹ್ಲಾನ ಜಿಲ್ಲಾಯಲ್ಲಿರುವ ಜುಲಸಾನದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಸುನೀತಾ ವಿಲಿಯಮ್ಸ್ ರವರ ಪೂರ್ವಜರು ಪಕ್ಕದ ದೇವಸ್ಥಾನಕ್ಕೆ ತೆರಳಿ ದೀಪ ಜ್ಯೋತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿ ಸಂಭ್ರಮಾಚರಣೆ ಆಚರಿಸಿದರಂತೆ.