20 June 2025 | Join group

ವಾಮಂಜೂರ್ ತಿರುವೈಲ್ ಗುತ್ತು ಕಂಬಳ ಫೆ.15 ಕ್ಕೆ - ತಿರುವೈಲೋತ್ಸಹದ ಸಂಭ್ರಮ

  • 14 Feb 2025 12:32:56 AM

Mangalore : ಇದೇ ಬರುವ ಫೆಬ್ರವರಿ 15 ರಂದು ವಾಮಂಜೂರು ತಿರುವೈಲ್ ಗುತ್ತು ಸಂಕು ಪೂಂಜಾ - ದೇವು ಪೂಂಜಾ ಜೋಡುಕರೆ ಕಂಬಳ ಅದ್ದೂರಿಯಿಂದ ನಡೆಯಲಿದೆ. ಕಂಬಳ ಟ್ರಸ್ಟ್ ವತಿಯಿಂದ ನಡೆಯುವ ಈ ತಿರುವೈಲೋತ್ಸವ ಫೆಬ್ರವರಿ 15 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಶುರುವಾಗಲಿದೆ ಎಂದು ತಿಳಿಸಲಾಗಿದೆ.

 

ವಾಮಂಜೂರಿನ ತಿರುವೈಲ್ ಶ್ರೀ ಅಮೃತೇಶ್ವರ ದೇಗುಲದ ಎದುರಿನ ತಿರುವೈಲ್ ಗುತ್ತಿನ ಕಂಬಳದ ಗದ್ದೆಯಲ್ಲಿ ನಡೆಯಲಿದೆ ಈ ಕಂಬಳೋತ್ಸವ. ನೇಗಿಲು ಹಿರಿಯ, ನೇಗಿಲು ಕಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ, ಅಡ್ಡ ಹಲಗೆ ಮತ್ತು ಕನ ಹಲಗೆ ಈ ಎಲ್ಲಾ ಹಂತದ ಕೋಣದ ಓಟದ ಸ್ಪರ್ಧೆ ನಡೆಯಲಿದೆ. ಮಂಗಳೂರು ಭಾಗದ ಜನರಿಗೆ ಮತ್ತು ಕಂಬಳ ಪ್ರೇಮಿಗಳಿಗೆ ಸಂತಸ ತರುವ ಕಂಬಳ ವಾಮಂಜೂರಿನ ತಿರುವೈಲೋತ್ಸವ ಕಂಬಳ.

 

ಈ ಕಂಬಳಕ್ಕೆ ಹಲವಾರು ಗಣ್ಯರು ಪಾಲುಪಡೆಯಲಿದ್ದಾರೆ ಅದರಲ್ಲೂ ಬಾಲಿವುಡ್ ಸುನೀಲ್ ಶೆಟ್ಟಿ ಆಕರ್ಷಣೆಯ ಕೇಂದ್ರ ಬಿಂದುವಾಗಲಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕಾ ಖರ್ಗೆ, ದಕ್ಷಿಣ ಕನ್ನಡ ಸಂಸದ ಕ್ಯಾ. ಬೃಜೇಶ್ ಚೌಟ ಮತ್ತು ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

 

ಕೋಣಗಳು ಕರೆಗೆ ಇಳಿಯುವ ಸಮಯ ಬೆಳಿಗ್ಗೆ 9.30 ಕ್ಕೆ ನೇಗಿಲು ಕಿರಿಯ, ಬೆಳಿಗ್ಗೆ 11.30 ಕ್ಕೆ ನೇಗಿಲು ಕಿರಿಯ, ಸಂಜೆ 3.00 ಕ್ಕೆ ಹಗ್ಗ ಕಿರಿಯ ಮತ್ತು ಹಿರಿಯ, ಅಡ್ಡ ಹಲಗೆ ಮತ್ತು ಕನ ಹಲಗೆ ಸಂಜೆ 5.00 ಕ್ಕೆ ಎಂದು ತಿಳಿದು ಬಂದಿದೆ. ಒಟ್ಟು 170 ಕ್ಕಿಂತ ಮೇಲ್ಪಟ್ಟು ಕೋಣಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ ಕಂಬಳ ಸಮಿತಿಯವರು.

 

ಕೋಣಗಳನ್ನು ಬಿಡಿಸುವವರು, ಓಟಗಾರರು, ತೀರ್ಪುಗಾರರು ಮತ್ತು ಸರ್ವರ ಸಹಕಾರವನ್ನು ಪಡೆದು, ಕಳೆದ ಬಾರಿಯಂತೆ ಈ ಬಾರಿಯೂ ಬಹಳ ಬೇಗ ಕಂಬಳ ಮುಗಿಸುವ ಉದ್ದೇಶವನ್ನು ಕಂಬಳ ಸಮಿತಿ ಇಟ್ಟುಕೊಂಡಿದೆ ಎಂದು ತಿರುವೈಲ್ ಗುತ್ತು ಕಂಬಳ ಸ್ಥಾಪನಾಧ್ಯಕ್ಷರಾದ ನವೀನ್ ಚಂದ್ರ ಆಳ್ವ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಋತುವಿನ ಅತ್ಯಂತ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಂಡ ಕಂಬಳ ( 22.30 ಗಂಟೆ ) ಎನ್ನುವ ಹೆಗ್ಗಳಿಕೆಗೆ ತಿರುವೈಲ್ ಗುತ್ತು ಸಂಕು ಪುಂಜ - ದೇವು ಪುಂಜ ಕಂಬಳ ಪಾತ್ರವಾಗಿದೆ.