ಆಪರೇಷನ್ ಸಿಂಧೂರ ಬಗ್ಗೆ ಇತ್ತೀಚೆಗೆ ಹಲವಾರು ನಾಯಕರಗಳು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಮೇ 25 ರಂದು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ ಮೋದಿ ಬಿಜೆಪಿ ನಾಯಕರುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಯೊಂದು ವಿಷಯಗಳ ಬಗ್ಗೆ ಮಾತನಾಡುವುದು ಮತ್ತು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಸಲಹೆಯನ್ನು ನೀಡಿದ್ದಾರೆ.
ಭಾರತ 'ಆಪರೇಷನ್ ಸಿಂಧೂರ್' ಮೂಲಕ ಮೇ 7 ರಂದು ಪಾಕಿಸ್ತಾನದಲ್ಲಿ ನೆಲಿಸಿದ್ದ 7 ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ ನಂತರ ಕೆಲ ಬಿಜೆಪಿ ನಾಯಕರುಗಳು ತಮ್ಮ ಬಾಯಿಯನ್ನು ಹರಿಬಿಟ್ಟಿದ್ದಾರೆ. ಇದರಿಂದಾಗಿ ಬಿಜೆಪಿ ಪಕ್ಷ ಮುಜುಗರಕ್ಕೆ ಒಳಗಾಗಿತ್ತು.
ಮಧ್ಯಪ್ರದೇಶದ ಸಚಿವ ಆಪರೇಷನ್ ಸಿಂಧೂರ್ ಮುಗಿಸಿದ ನಂತರ ದೇಶದ ಜನತೆಗೆ ಘಟನೆಯ ವಿವರಣೆ ನೀಡಲು ಬಂದಿದ್ದ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ನೀಡಿದ ಹೇಳಿಕೆಯಿಂದ ದೇಶದಾದ್ಯಂತ ಜನರು ಕೋಪ ವ್ಯಕ್ತಪಡಿಸಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟುವರೆಗೂ ತಲುಪಿತ್ತು.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 11 ವರ್ಷ : ಭಾರತ ಇಂದು ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ ಎಂದ ಬಿಜೆಪಿ
ಮತ್ತೊಬ್ಬ ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಂಗ್ರ, ಪಹಲ್ಗಾಮ್ ದಾಳಿಯಲ್ಲಿ ಮಹಿಳೆಯರು ತಮ್ಮ ಗಂಡನನ್ನು ಕಳೆದುಕೊಳ್ಳಬೇಕಾಯಿತು, ಅವರು ಬಲಿಪಶುಗಳಾದರು ಯಾಕೆಂದರೆ ಅವರಲ್ಲಿ ವೀರ ಗುಣಗಳು ಮತ್ತು ಉತ್ಸಾಹಗಳು ಕಡಿಮೆಯಿತ್ತು ಎನ್ನುವ ಮೂಲಕ ಬಿಜೆಪಿ ಪಕ್ಷವನ್ನು ಗೊಂದಲಕ್ಕೆ ಸಿಲುಕಿಸಿದರು.
ಕಾಂಗ್ರೆಸ್ ಪಕ್ಷ ಇವರುಗಳನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿತ್ತು. ಬಿಜೆಪಿ ನಾಯಕರುಗಳಿಗೆ ಪಹಲ್ಗಾಮ್ ದಾಳಿಯಲ್ಲಿ ಬಲಿದಾನವಾದವರ ಬಗ್ಗೆ ಯಾವುದೇ ಕನಿಕರವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ ಹೇಳಿದ್ದಾರೆ.
ಈ ಎಲ್ಲಾ ಘಟನೆಗಳಿಂದ ಬೇಸೆತ್ತ ಪ್ರಧಾನಿ ಮೋದಿ, ಸಾರ್ವಜನಿಕ ಸಭೆಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡಬೇಡಿ. ಬಾಯಿ ಮುಚ್ಚಿಕೊಂಡು ಸಂಯಮದಿಂದ ಮಾತನಾಡುವಂತೆ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.